ವರ್ಣಾಶ್ರಮಗಳು ಮತ್ತು ಧರ್ಮ

ವೇದಗಳಲ್ಲಿ ಎಷ್ಟೋ ವಿಷಯಗಳನ್ನು ಬೀಜರೂಪದಲ್ಲಿ ಹೇಳಲಾಗಿದೆ. (ಶ್ರುತಿ)
ಇವುಗಳನ್ನು ಸ್ಮೃತಿಗಳಲ್ಲಿ ಶಾಸ್ತ್ರ ರೂಪದಲ್ಲಿ (ಶಾಸನಗಳಂತೆ) ವಿವರಿಸಲಾಗಿದೆ.
ಪುರಾಣಗಳಲ್ಲಿ ಕಥೆಗಳ ಮೂಲಕ ತಿಳಿಹೇಳುವ ಪ್ರಯತ್ನ ಮಾಡಲಾಗಿದೆ.
ಇತಿಹಾಸಗಳ ದೃಷ್ಟಾಂತಗಳನ್ನಿಟ್ಟು ಇವುಗಳನ್ನೇ ವಿವರಿಸುತ್ತಾ ಮಹಾಕಾವ್ಯಗಳನ್ನು ಹಣೆಯಲಾಗಿದೆ.
ಸಾಲದಕ್ಕೆ ಇವುಗಳನ್ನು ಯೋಗ್ಯ ರೀತಿಯಲ್ಲಿ ವಿವರಿಸಲು ಸಿದ್ಧಾಂತ - ಭಾಷ್ಯಗಳು ಬಂದಿವೆ.

ಶೃತಿಯೊಂದನ್ನು ಬಿಟ್ಟು ಎಲ್ಲದರಲ್ಲೂ ಅಷ್ಟಿಷ್ಟು ಧನಾತ್ಮಕ ಹಾಗೂ ಋಣಾತ್ಮಕ ಪ್ರಕ್ಷೇಪಗಳು, ಕವಿಸಮಯಾದಿಗಳು ಸೇರಿಹೋಗಿವೆ.

ಇವುಗಳೆಲ್ಲದರ ಪ್ರಕಾರ ನಾಲ್ಕು ವರ್ಣಗಳು ಹಾಗೂ ನಾಲ್ಕು ಆಶ್ರಮಗಳನ್ನು ಹೇಳಲಾಗಿದ್ದು ಎಲ್ಲವಕ್ಕೂ ತಮ್ಮದೇ ಆದ ಕಟ್ಟುಪಾಡುಗಳಿವೆ.

ಶೂದ್ರರಿಗೆ ಗ್ರಹಸ್ಥ ಧರ್ಮವೊಂದೇ ಇದ್ದರೂ ಅದರಲ್ಲಿ ಇತರರಿಗಿರುವಷ್ಟು ಕಟ್ಟುಪಾಡುಗಳಿಲ್ಲ. ಒಂದು ರೀತಿಯಲ್ಲಿ ಸ್ವತಂತ್ರ ಜೀವನ ಅವರದ್ದು. ಇದು ವರ್ಣಗಳಿಗೆಲ್ಲ ಪಂಚಾಂಗ ಇರುವಂತೆ. ಎಲ್ಲರೂ ಶೂದ್ರರನ್ನು ಅವಲಂಬಿಸಬೇಕು. ಅವರ ಸಂಖ್ಯೆ ಹೆಚ್ಚು. ಅವರಿಂದಲೇ ಸಮೃದ್ಧಿ, ಅವರಿಂದಲೇ ಉತ್ಪಾದನೆ, ಅವರು ರಾಷ್ಟ್ರದ ಸಂಪತ್ತು. ಅವರು ಲೋಹಶಾಸ್ತ್ರ, ಕಾಷ್ಟಶಾಸ್ತ್ರ, ತಂತ್ರಜ್ಞಾನ, ಕೃಷಿ ಮುಂತಾದ ಜೀವನಕಲೆಗಳನ್ನು ಬದುಕುವವರು. ಇವರು ಧನಧಾನ್ಯಸಂಚಯ ಮಾಡಬಹುದು ಆಸ್ತಿ ಪಾಸ್ತಿಗಳೆಲ್ಲ ಇವರ ಸ್ವತ್ತು.

ವೈಶ್ಯರಿಗೆ ಬ್ರಹ್ಮಚರ್ಯ ಹಾಗೂ ಗೃಹಸ್ಥ ಧರ್ಮಗಳ ಕಟ್ಟುಪಾಡುಗಳಿವೆ. ಶೂದ್ರರ ಉತ್ಪಾದನೆಗೆ ಇವರ ಮೂಲಕ ಮೌಲ್ಯವರ್ಧನೆಯಾಗುತ್ತದೆ. ಇವರುಗಳು ವಸ್ತುಗಳ ಗುಣಮಟ್ಟ ತಿಳಿದು ಅದರ ಬೆಲೆ ನಿರ್ಧರಿಸಿ ವ್ಯಾಪಾರ ವಹಿವಾಟು ಮಾಡಬೇಕು. ರಾಜ್ಯದ ಒಂದು ಭಾಗದಲ್ಲಿ ಉಪ್ಪು ಸಿಗುತ್ತದೆ ಇನ್ನೊಂದು ಭಾಗದಲ್ಲಿ ಖಾರ ಮತ್ತೆ ಹುಳಿಯ ಆಯಾತ ಮಾಡಬೇಕಾಗಬಹುದು. ಈ ರೀತಿ ಆರ್ಥಿಕ ಹೊಂದಾಣಿಕೆ ಮಾಡುವುದು ಇವರ ಧರ್ಮ. ಇವರು ಜನಸಂಖ್ಯೆಯಲ್ಲಿ ಎರಡನೇ ಸ್ಥಾನ. ಇವರು ಮಿತವಾಗಿ ಸಂಪತ್ತನ್ನು ಹೊಂದಬಹುದು. ಕಟ್ಟುಪಾಡುಗಳಲ್ಲಿ ಶೂದ್ರರಷ್ಟು ಸ್ವಾತಂತ್ರ್ಯವಿಲ್ಲ.

ಕ್ಷತ್ರಿಯರಿಗೆ ನಾಲ್ಕೂ ಆಶ್ರಮಗಳಿವೆಯಾದರೂ ಯುದ್ಧಗಳಿಂದಾಗಿ ಎರಡು ಆಶ್ರಮ ಪೂರೈಸುವುದರಲ್ಲೇ ಬಹುತೇಕರು ಮುಕ್ತಿ ಕಾಣುತ್ತಿದ್ದರು. ಕಟ್ಟುಪಾಡುಗಳಿಂದ ಕೆಲವೆಡೆ ವಿನಾಯಿತಿಗಳಿದ್ದರೂ ವೈಶ್ಯರ ನಂತರದ ಸ್ಥಾನ. ದೇಶದ ರಕ್ಷಣೆ, ನ್ಯಾಯಾಂಗ ವ್ಯವಸ್ಥೆಯ ಪಾಲನೆ, ಶಿಕ್ಷೆ ರಕ್ಷೆಗಳು, ಪ್ರಜಾಸಂಪತ್ತಿನ ಸದ್ನಿರ್ವಹಣೆ ಮುಂತಾದವು ಇವರ ಕೆಲಸ. ಜನಸಂಖ್ಯೆಯಲ್ಲೂ ವೈಶ್ಯರ ನಂತರದ ಸ್ಥಾನ. ದೇಶದ ಎಲ್ಲಾ ಸಂಪತ್ತನ್ನು ನಿರ್ವಹಿಸುವ ಅಧಿಕಾರ ಇದ್ದರೂ ಯಾವ ಸಂಪತ್ತೂ ಇವರದಲ್ಲ. (ಇಂದು ಬ್ಯಾಂಕ್ ಮಾಡುವಂತೆ). ಜೀವನದಲ್ಲಿ ಮಾಡುವ ತ್ಯಾಗವನ್ನು ಪರಿಗಣಿಸಿ ಭೋಗಾಧಿಕಾರವನ್ನು ಹೆಚ್ಚು ನೀಡಲಾಗಿದೆಯಾದರೂ ಅತಿಕ್ರಮಣ ಮಾಡುವಂತಿಲ್ಲ.

ಇದರಮೇಲೆ ಬ್ರಾಹ್ಮಣರು.


ಬ್ರಾಹ್ಮಣರಿಗೆ ಎಲ್ಲಾ ವಿದ್ಯೆಗಳನ್ನು ತಿಳಿಯುವ ಅಧಿಕಾರ ಉಂಟಾದರೂ ಪ್ರಯೋಗಿಸುವಂತಿಲ್ಲ. (ಉದಾ- ಕೃಷಿ ಮಾಡುವಂತಿಲ್ಲ, ಮರ ಕಡಿಯುವಂತಿಲ್ಲ, ಶಸ್ತ್ರ ಪ್ರಯೋಗ ನಿಷಿದ್ಧ) ಧನಧಾನ್ಯ ಸಂಚಯ ಮಾಡದೇ ದೈವಕ್ಕೆ ಅವಲಂಬಿತರಾಗಿರಬೇಕು. ಗುರುಸ್ಥಾನದಲ್ಲಿ ನಿಂತು ಬೇರೆ ವರ್ಣಾಶ್ರಮ ಧರ್ಮಗಳ ಪರಿಪಾಲನೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಶಾಸ್ತ್ರಾದಿಗಳ ಅಧ್ಯಯನ ಮಾಡುತ್ತ, ತಪಸ್ಸುಗಳನ್ನು ಮಾಡುತ್ತ ಜ್ಞಾನ ಸಂಪಾದಿಸಿ ಅದರ ಸದ್ವಿನಿಯೋಗವಾಗುವಂತೆ ಹಾಗೂ ದುರ್ವಿನಿಯೋಗವಾಗದಂತೆ ನೋಡಿಕೊಳ್ಳಬೇಕು. ಯಜ್ಞಯಾಗಾದಿಗಳನ್ನು ಮಾಡುತ್ತ ಪ್ರಕೃತಿಯ ಸಮತೋಲನವನ್ನೂ (ಮಾನವನಿಂದಾದ ದೋಷಗಳು ಭಾಧಿಸದಂತೆ) ಮಾಡುತ್ತಿರಬೇಕು. ಕಷ್ಟಕಾಲದಲ್ಲಿ ಭಿಕ್ಷೆ ಬೇಡಿದರೂ ಧರ್ಮಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು. ಅದಕ್ಕೆ ಬೇಕಾಗಿ ಉಳಿದ ವರ್ಣಗಳ ಸಂಪರ್ಕದಲ್ಲಿರಬೇಕು.

ಈ ಎಲ್ಲ ಸಂಸ್ಕೃತಿ ಸಂಪ್ರದಾಯಗಳು ತಲೆಮಾರಿನಿಂದ ತಲೆಮಾರಿಗೆ ಹೋಗುವುದು ಸುಲಭ ಮತ್ತು ಯೋಗ್ಯ ಎಂಬ ಭಾವನೆಗಳಿಂದ ವರ್ಣಗಳು ಜಾತಿಗಳಾದವು. ಸ್ವಚ್ಛಂದವಾಗಿ ದುಡಿದು ತಿಂದುಂಡು ಬದುಕಿದವನ ಮಗನಿಗೆ ಕಾಡಿನಲ್ಲಿ ಮೂಗು ಹಿಡಿದು ಕುಳಿತುಕೊಳ್ಳುವುದೂ ಬೇಕಿರಲಿಲ್ಲ, ಕಟ್ಟುಪಾಡುಗಳನ್ನು ನೋಡಿ ಬೆಳೆದವನಿಗೆ ತನ್ನ ಜವಾಬ್ದಾರಿಯ ಅರಿವು ಅಂಕೆ ಮೀರಲು ಬಿಡುತ್ತಿರಲಿಲ್ಲ.

ಆಶ್ರಮ ಧರ್ಮಗಳು

ಬ್ರಹ್ಮಚರ್ಯ
ಯಜ್ಞೋಪವೀತ ಧರಿಸಿದ ಮೇಲೆ ತನ್ನ ವರ್ಣಕ್ಕೆ, ಕುಲಕ್ಕೆ, ಗೋತ್ರಕ್ಕೆ ಸಂಬಂಧಿಸಿದ ಜ್ಞಾನವನ್ನು ತನ್ನ ಹಿರಿಯರಿಂದ ಸಂಪಾದಿಸಲು ಬೇಕಾಗಿ ಈ ಆಶ್ರಮ ಹಾಗೂ ಕಟ್ಟುಪಾಡುಗಳು. ಕಲಿಯುವುದು ಹಾಗೂ ಕಲಿತಿದ್ದನ್ನು ಆಚರಿಸುವುದು ತನ್ಮೂಲಕ ಜೀವನಕ್ಕೆ ಅಳವಡಿಸಿಕೊಳ್ಳುವುದು ಈ ಆಶ್ರಮದ ಗುರಿ. ಆಹಾರ, ನಿದ್ರೆ, ಹವ್ಯಾಸಗಳು ವರ್ಣಗಳ ಜವಾಬ್ದಾರಿಯನ್ನು ಅವಲಂಬಿಸಿ ಬಿಗಿಯಾಗಿರುತ್ತಿದ್ದವು. ಗುರುಸೇವೆ ಮಾಡಿಕೊಂಡು ದೈನ್ಯನಾಗಿ ವಿನಯ ಪೂರ್ವಕವಾಗಿ ವಿದ್ಯಾರ್ಜನೆ ಮಾಡಲು ಈ ಆಶ್ರಮದಲ್ಲಿ ಅವಕಾಶ ಹಾಗೂ ಕಟ್ಟುಪಾಡುಗಳು ರೂಪುಗೊಂಡಿವೆ. ಲೌಕಿಕವನ್ನು ಸರಿಯಾಗಿ ತಿಳಿದು ಪಾರಮಾರ್ಥದತ್ತ ಗುರಿ ಇಡುವ ನಡೆ ಈ ಆಶ್ರಮದ್ದು. ಶೂದ್ರರಿಗೆ ಈ ಆಶ್ರಮವಿದ್ದರೂ ಲೌಕಿಕ ವಿದ್ಯೆಗಳೇ ಪ್ರಧಾನ ಇರುವುದರಿಂದ ಕಟ್ಟುಪಾಡುಗಳು ಕನಿಷ್ಠ ಹಾಗೂ ಕ್ರಮಪ್ರಕಾರ ಬ್ರಾಹ್ಮಣರಿಗೆ ಗರಿಷ್ಠ.
ಗ್ರಹಸ್ಥಾಶ್ರಮ
ಲೌಕಿಕದ ಅನುಭವಜ್ಞಾನ ಗಳಿಸಿ ಆಧ್ಯಾತ್ಮದತ್ತ ಹೆಜ್ಜೆ ಹಾಕುವ ಆಶ್ರಮ. ಇಲ್ಲಿ ಕಟ್ಟುಪಾಡುಗಳೊಂದಿಗೆ ಆಶ್ರಮಧರ್ಮದಂತೆ ಜವಾಬ್ದಾರಿಗಳೂ ಹೆಚ್ಚು. ಮುಂದಿನ ಜನಾಂಗವನ್ನು ಸಿದ್ಧಪಡಿಸುವ ಹೊಣೆಗಾರಿಕೆ ಬಹುದೊಡ್ಡದು. ಬ್ರಹ್ಮಚಾರಿ ಹಸಿದು ಬಂದರೂ, ಸಂನ್ಯಾಸಿ /ವಾನಪ್ರಸ್ಥಿಗಳು ಬಂದರೂ ಅವರ ಆಧರಾತಿಥ್ಯಗಳು ಇವರ ಹೊಣೆ. ಸಹಜವಾಗಿಯೇ ಬ್ರಾಹ್ಮಣರಿಗೆ ಇಲ್ಲೂ ಕಟ್ಟುಪಾಡುಗಳು ಜಾಸ್ತಿ.
ವಾನಪ್ರಸ್ಥ
ಗ್ರಹಸ್ಥಾಶ್ರಮದ ಹೊಣೆಗಳನ್ನೆಲ್ಲ ಮುಂದಿನ ಜನಾಂಗಕ್ಕೆ ವಹಿಸಿ, ಸತಿಪತಿಯರು ಎಲ್ಲಾ ಸುಖಭೋಗಗಳಿಂದ ಮುಕ್ತರಾಗಿ ಪಾರಮಾರ್ಥಿಗಳಾಗಿ ಬ್ರಹ್ಮ ಜ್ಞಾನಿಗಳನ್ನು ಅನುಸರಿಸಲು ಕಾಡಿನತ್ತ, ಋಷ್ಯಾಶ್ರಮಗಳತ್ತ ಗುರುವನ್ನು ಹುಡುಕಿ ಹೊರಡುವುದು ಮತ್ತು ಗುರುವಿನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಗುರುವನ್ನಾಶ್ರಯಿಸಿ ಬ್ರಹ್ಮಜ್ಞಾನವನ್ನು ಪಡೆದು ಗುರುವಿನ ಅನುಜ್ಞೆಯಿದ್ದರೆ ಅದನ್ನು ಸಮಾಜದ ಮೇಲೆ ಸದ್ವಿನಿಯೋಗ ಮಾಡುವುದು. ಇನ್ನೂ ಪಾರಮಾರ್ಥಿಕದತ್ತ ಆಸಕ್ತಿ, ದೇಹಾರೋಗ್ಯಗಳಿದ್ದಲ್ಲಿ ಬ್ರಹ್ಮ ಸಾಕ್ಷಾತ್ಕಾರಕ್ಕಾಗಿ ಸಂನ್ಯಾಸವನ್ನಾಶ್ರಯಿಸುವುದು. ಆಶ್ರಮ ಪದ್ಧತಿಯಲ್ಲಿ ಉನ್ನತಿ ಪಡೆದಂತೆ ಕಟ್ಟುಪಾಡುಗಳೂ ಕಠಿಣ.

ವಾನಪ್ರಸ್ಥದ ನಂತರ ಸಂನ್ಯಾಸಾಶ್ರಮ. ಬ್ರಹ್ಮಸಾಕ್ಷಾತ್ಕಾರ ಹಾಗೂ ಬ್ರಹ್ಮಜ್ಞಾನದ ಯೋಗ್ಯ ವಿನಿಯೋಗ ಈ ಆಶ್ರಮದ ಪರಮೋದ್ದೇಶ. ಬ್ರಹ್ಮಸಾಕ್ಷಾತ್ಕಾರ ಪಡೆದ ಸಂನ್ಯಾಸಿಯ ಮಾತು ವೇದವಾಕ್ಯಗಳು. ಆತ ಪರಮ ಮೌನಿ. ಆತನ ಮೌನದಲ್ಲೂ, ಮಾತು ಕೃತಿಗಳಲ್ಲೂ ಜಗತ್ತಿಗೆ ಜ್ಞಾನ ಧರ್ಮ ಪ್ರಸಾದವಿದೆ. ಆತನ ಮಾತನ್ನು ಯಾವ ಚಕ್ರವರ್ತಿಗಳೂ ತಿರಸ್ಕರಿಸುತ್ತಿರಲಿಲ್ಲ. ಪರಮಶಾಸನಾಧಿಕಾರವಿದ್ದರೂ ಆತನಮೇಲೆ ಯಾರೂ ಕಟ್ಟುಪಾಡುಗಳನ್ನು ವಿಧಿಸಲಾಗದಿದ್ದರೂ ಆತ ಸ್ವತಃ ತನ್ನನ್ನು ತಾನು ಅತೀಕಠಿಣ ಕಟ್ಟುಪಾಡುಗಳಿಗಳವಡಿಸಿಕೊಂಡಿರುತ್ತಿದ್ದ. ವಿಶ್ವಮಿತ್ರರು ಹಲವಾರು ಬಾರಿ ಕಟ್ಟುಪಾಡುಗಳಿಂದ ಭೃಷ್ಟರಾಗಿ ಪುನಃ ತಪಸ್ಸನ್ನಾಚರಿಸಿ ಬ್ರಹ್ಮತ್ವ ಸಿದ್ಧಿಸಿಕೊಂಡು ಪರಿಪೂರ್ಣರಾದರು.

ಹೀಗಿದ್ದ ವೈದಿಕ ವರ್ಣಾಶ್ರಮ ಪದ್ಧತಿ ರಾಜಕೀಯ, ಸಾಮಾಜಿಕ ವಿಪ್ಲವಗಳ ಕಾರಣದಿಂದಲೂ, ಅವೈದಿಕ ಹಾಗೂ ನಿರೀಶ್ವರಾದಿ ಮತಗಳ ಉದಯದ ಕಾರಣದಿಂದಲೂ ಲುಪ್ತವಾಗುತ್ತಿರುವಾಗ ಕಾಲಕ್ಕೆ ತಕ್ಕಂತೆ ಮತ್ತೆ ಅದಕ್ಕೊಂದು ಚೌಕಟ್ಟನ್ನು ಕೊಟ್ಟು ಪುನರುತ್ಥಾನ ಮಾಡಿದವರು  ಶಂಕರಾಚಾರ್ಯರು ನಂತರ ಕೌಟಿಲ್ಯ.

ಇನ್ನಷ್ಟು ಕಾಲಗಳ ನಂತರ ಮತಬೇಧಗಳುಂಟಾಗಿ ಈ ಮಠಮಾನ್ಯಗಳ ಪದ್ಧತಿ ಹಲವು ರೂಪಗಳನ್ನು ಪಡೆದು, ಮಾರ್ಪಾಡನ್ನು ಹೊಂದಿ ಇಲ್ಲಿಗೆ ಬಂದಿದೆ. ಈಗ ಎಲ್ಲ ವರ್ಣಗಳೂ ಆಶ್ರಮಗಳೂ ಸ್ವಾರ್ಥವೊಂದನ್ನೇ ಆಶ್ರಯಿಸಿ ಭೋಗಾವಲಂಬಿಯಾಗಿ ಹೋಗಿದ್ದರೂ ಬೀಜರೂಪದಲ್ಲಿ ಸಚ್ಚಾರಿತ್ರ್ಯವಂತರು ತಮ್ಮ ವರ್ಣಾಶ್ರಮ ಧರ್ಮಗಳನ್ನು ಕಾಪಾಡಿಕೊಂಡು ಅಲ್ಲಲ್ಲಿ ಇರುವುದೊಂದು ಕೊನೆಯ ಭರವಸೆಯಾಗಿದೆ.

Comments

  1. ತುಂಬ ಚೆನ್ನಾಗಿ ವಿವರಿಸಿರುವಿರಿ.

    ReplyDelete
  2. ಆ ಕಾಲದಲ್ಲಿ ಅಧ್ಯಯನಗಳು ಶೂದ್ರರಿಗೆ ಇರಲಿಲ್ಲ ಅಲ್ಲವೇ, ಉಪನಾಯನಾದಿಗಳು ಕೂಡ ಇರಲಿಲ್ಲ ಅಲ್ಲವೇ.. ಹಾಗಿರುವಾಗ ಲೋಹ ಶಾಸ್ತ್ರ ತಂತ್ರಜ್ಞಾನ ಇತ್ಯಾದಿಗಳು ಸಂಸ್ಕೃತದಲ್ಲಿಯೇ ಇದ್ದುದರಿಂದ ಶೂದ್ರರು ಅದನ್ನು ಹೇಗೆ ಕಲಿಯಲು ಸಾಧ್ಯ ?! ಅದರಿಂದ ಜೀವನ ನಡೆಸಲು ಹೇಗೆ ಸಾಧ್ಯ ?!

    ReplyDelete
  3. ಆ ಕಾಲದಲ್ಲಿ ಅಧ್ಯಯನಗಳು ಶೂದ್ರರಿಗೆ ಇರಲಿಲ್ಲ ಅಲ್ಲವೇ, ಉಪನಾಯನಾದಿಗಳು ಕೂಡ ಇರಲಿಲ್ಲ ಅಲ್ಲವೇ.. ಹಾಗಿರುವಾಗ ಲೋಹ ಶಾಸ್ತ್ರ ತಂತ್ರಜ್ಞಾನ ಇತ್ಯಾದಿಗಳು ಸಂಸ್ಕೃತದಲ್ಲಿಯೇ ಇದ್ದುದರಿಂದ ಶೂದ್ರರು ಅದನ್ನು ಹೇಗೆ ಕಲಿಯಲು ಸಾಧ್ಯ ?! ಅದರಿಂದ ಜೀವನ ನಡೆಸಲು ಹೇಗೆ ಸಾಧ್ಯ ?!

    ReplyDelete

Post a Comment

Popular posts from this blog

ಬಾಳಕುದುರು ಮಠದ ಇತಿಹಾಸ

ಕಂಡುಳಿದವರು ಉಲಿದಂತೆ...