ಬಾಳಕುದುರು ಮಠದ ಇತಿಹಾಸ

 ಮೂಲ ಲೇಖನ: ಡಾ. ಪಿ. ಗುರುರಾಜ ಭಟ್ 

ಉಲ್ಲೇಖ : "ಸ್ವಾತಂತ್ರ್ಯಾಂಕ" ಎಂಬ ಅಂಕಣ. "ಪ್ರಕಾಶ" ಎಂಬ  ಪುಸ್ತಕ 1969 

ಸಂಗ್ರಹ: ಶ್ರೀ ನಾಗರಾಜ ವಾರಂಬಳ್ಳಿ, ಹವ್ಯಾಸಿ ಛಾಯಾಗ್ರಾಹಕ, ಮೂಡುಗರಡಿ, ಬ್ರಹ್ಮಾವರ 

ದಿನಾ೦ಕ ೧೧.೦೮.೨೦೨೦ ರಂದು "ಶ್ರೀಮಠ ಬಾಳೆಕುದುರು" ಇವರ facebook ಪೇಜ್ ನಲ್ಲಿ ಪ್ರಕಟಗೊಂಡ ಲೇಖನದ ಪ್ರತಿಯಲ್ಲಿರುವಂತೆ.



ದಕ್ಷಿಣಕನ್ನಡ ಜಿಲ್ಲೆಯ ಧಾರ್ಮಿಕ ಸಂಸ್ಥೆಗಳಲ್ಲಿ ಬಾಳಕುದುರು ಮಠವು ಒಂದಾಗಿದೆ. ಇದು ಇತಿಹಾಸ ಕಾಲದಲ್ಲಿ ನಮ್ಮ ಜಿಲ್ಲೆಯಲ್ಲಿ ತುಂಬಾ ಪ್ರಭಾವಿತವಾದ ಮಠವಾಗಿತ್ತು. ಈ ಮಠಕ್ಕೆ ಅನೇಕ ಕಡೆಗಳಲ್ಲಿ ಶಿಷ್ಯವರ್ಗವಿತ್ತು. ಮಾತ್ರವಲ್ಲದೆ ಈ ಶಿಷ್ಯವರ್ಗವು ಇಂದಿಗೂ ವ್ಯಾಪಿಸಿಕೊಂಡಿದೆ ಎಂಬ ವಿಷಯವು ಗಮನಾರ್ಹವಾಗಿದೆ. ಈ ಮಠಕ್ಕೆ ಈಗ ಐರೋಡಿ, ಕೋಡಿ, ನೀಲಾವರ, ಚೇರ್ಕಾಡಿ, ಒಡ್ದರ್ಸೆ, ಹಾನೇಹಳ್ಳಿ, ಬಳ್ಕೂರು, ಕಂದಾವರ, ಹುತ್ತೂರು, ಅಂಜಾರು ಇತ್ಯಾದಿ ಗ್ರಾಮಗಳಲ್ಲಿ ಆಸ್ತಿ ಇರುವುದು ಕಂಡು ಬರುತ್ತದೆ. ಹುತ್ತೂರು ಮತ್ತು ಅಂಜಾರುಗಳಲ್ಲಿ ಉಪಮಠಗಳು ಇರುವುದನ್ನು ಗಮನಿಸಬಹುದು. 

ಶ್ರೀಮಠ ಬಾಳಕುದುರು ಸುತ್ತ ಮುತ್ತ  

 ಬಾಳಕುದುರು ಮಠವು ಭಾಗವತ ಸಂಪ್ರದಾಯವನ್ನು ಎತ್ತಿ ಹಿಡಿಯುವ ಒಂದು ಧಾರ್ಮಿಕ ಕೇಂದ್ರ. ಈ ಮಠವು ಉಡುಪಿ ತಾಲೂಕಿನ(೧೯೬೯ ರಂತೆ) ಮಾಬುಕಳದ  ಸಮೀಪವಿರುವ ಬಾಳಕುದುರು ಗ್ರಾಮದಲ್ಲಿದೆ. ಈ ಮಠದ ಸಮೀಪ ಹಂಗಾರಕಟ್ಟೆ ಎಂಬ ಚಿಕ್ಕ ಬಂದರಿದೆ. ಬಾರಕೂರು ಸಂಸ್ಥಾನ ವಾಗಿದ್ದ ಐತಿಹಾಸಿಕ ಕಾಲದಲ್ಲಿ ಹಂಗಾರಕಟ್ಟೆಯು ಬಹುದೊಡ್ಡ ಬಂದರೆ ಆಗಿದ್ದಂತೆ ಕಂಡು ಬರುತ್ತದೆ. ಈ ಮಠದ ಒಟ್ಟಿಗೆ ತಾಗಿ ಸಂಗಮೇಶ್ವರ ಎಂಬ ಚಿಕ್ಕ ದೇಗುಲವಿದೆ. ಒಂದು ಕಾಲದಲ್ಲಿ ಸೀತಾ ಮತ್ತು ಸುವರ್ಣಾ ನದಿಗಳು ಸಂಗಮಗೊಂಡ ಸ್ಥಳವಿದಾಗಿತ್ತೆಂಬ ಐತಿಹ್ಯ ಪ್ರಶಾಂತವಾದ ಪ್ರದೇಶದಲ್ಲಿ ಈ ಮಠವು ಸ್ಥಾಪಿಸಲ್ಪಟ್ಟಿದೆ.  

ಬಾಳಕುದುರು ಎಂಬೀ ಹೆಸರಿನ ಬಗೆಗೆ ಜಿಜ್ಞಾಸೆ.

ಈ ಹೆಸರಿನ ಬಗೆಗೆ ಜಿಜ್ಞಾಸೆ ತಾಳುವುದು ಸಹಜವೇ ಆಗಿದೆ. ಆದರೆ ಈ ಹೆಸರಿನ ವ್ಯುತ್ಪತ್ತಿಯ ಬಗ್ಗೆ ಅಂತಿಮ ನಿರ್ಧಾರವನ್ನು ಮಾಡುವುದು ಕಷ್ಟ. ಬಾಳೆಗಿಡಗಳಿಂದ ಈ ಹೆಸರು ಬಂದಿದೆಯೆನ್ನಬಹುದಾದರೆ 'ಬಾಳು' ಎಂಬ ಪದದಿಂದ ಬಂದಿರಲೂ ಸಾಧ್ಯವಿದೆ ಅನ್ನಬಹುದು. ನದಿಯು ಹರಿಯುವಾಗ ಸಮತಟ್ಟಾದ ಸ್ಥಳದಲ್ಲಿ ಅದು ನಿರ್ಮಿಸುವ ದ್ವೀಪದಂತಿರುವ ಭೂಬಾಗಕ್ಕೆ ಕುದುರು ಅನ್ನುತ್ತಾರೆ. ಅಂತಹ ಒಂದು ಕುದುರು ಬಾಳಕುದುರು. 'ಬಾಳು' ಅಂದರೆ ಜೀವನಕ್ಕೆ ಅನುಗುಣವಾಗುವಂತಿರುವ ಅನುಕೂಲಕರವಾದ ಭೂಭಾಗ. ಈ ಕುದುರಿನಲ್ಲಿ ಬಾಳಾಗಿ ದೊರಕಿದ ಪ್ರದೇಶ ಬಾಳಕುದುರು ಎಂತಲೂ ತಿಳಿಯಬಹುದು. ನಮಗೆ ದೊರಕುವ ಶಾಸನಗಳಲ್ಲಿ 'ಬಾಳಕುದುರು' ಎಂದೇ ಉಲ್ಲೇಖಗೊಂಡಿದೆಯಲ್ಲದೆ ವಿನಃ 'ಬಾಳೆಕುದುರು' ಎಂಬೀ ರೂಪ ಕಂಡುಬರುವುದಿಲ್ಲ.

ಬಾಳಕುದುರು ಮಠದ ಸ್ಥಾಪನೆ

ಈ ಮಠವು ಎಂದು ಸ್ಥಾಪನೆ ಆಯಿತೆಂಬುದು ಇಂದಿಗೂ ತಿಳಿದುಬಂದಿಲ್ಲ. ಯಾರಿಂಮದ ಸ್ಥಾಪನೆ ಆಯಿತೆಂಬುದೂ ಸ್ಪಷ್ಟವಿಲ್ಲ. ಪರಂಪರೆಯಾಗಿ ಬಂದ ಒಂದು ವಿವರ ಕೆಳಗಿನಂತಿದೆ.  

ಶ್ರೀ ಶಂಕರಾಚಾರ್ಯರ ಗುರುಗಳಾದ ಗೋವಿಂದ ಭಾಗವತ್ಪಾದಾಚಾರ್ಯರ ಶಿಷ್ಯರಲ್ಲೊಬ್ಬರಾದ ಕುಮಾರಿಲ ಭಟ್ಟರ ಪರಂಪರೆಗೆ ಸೇರಿದ ಕೈವಲ್ಯಾಶ್ರಮರು ಈ ಮಠದ ಸಂಸ್ಥಾಪಕರು. ಇವರು ಹರಿದ್ವಾರ, ಕಾಶಿ, ಪ್ರಯಾಗ ಮೊದಲಾದ ಕ್ಷೇತ್ರಗಳನ್ನು ಸಂದರ್ಶಿಸಿ ದಕ್ಷಿಣಕ್ಕೆ ಬಂದರು. ಕ್ರೋಢಕ್ಷೇತ್ರವನ್ನು (ಶಂಕರನಾರಾಯಣ) ಸಂದರ್ಶಿಸಿ ಶುಕ್ತಿಮತಿ ತೀರದಲ್ಲಿ ಸೌರವೆಂಬ ಪಟ್ಟಣಕ್ಕೆ ಬಂದು ಅಲ್ಲಿ ಧ್ಯಾನಸ್ಥನಾಗಿರಲು ಅಲ್ಲಿನ ರಾಜನಾದ ಸಾವಂತನೆಂಬವನು ಈ ಗುರುಗಳಿಂದ ಪ್ರಭಾವಿತನಾಗಿ ಅವರಿಗೆ ಭೂದಕ್ಷಿಣೆಯನ್ನು ಇತ್ತನು. ಈ ಯತಿಗಳು ಇಲ್ಲಿ ಕೆಲವು ಕಾಲವಿದ್ದು ಪೂಜಾದಿಗಳನ್ನು ನಿರ್ವಹಿಸಲು ವ್ಯವಸ್ಥೆಯನ್ನು ಮಾಡಿದರು. (ಕುಂದಾಪುರ ತಾಲ್ಲೂಕಿನ ಕಂದಾವರ ಗ್ರಾಮದಲ್ಲಿರುವ ಹುತ್ತೂರು ಮಠವು ಬಾಳಕುದುರು ಮಠದ ಶಾಖಾ ಮಠವಾಗಿದೆ)

ಸೌರಪಟ್ಟಣದಿಂದ ಸ್ವಾಮಿಗಳು 'ಜಲಪುರ'ಕ್ಕೆ ಬಂದು (ಈಗಿನ ನೀಲಾವರ) ದೇವಿಯ ಆರಾಧನೆಯನ್ನು ಮಾಡಿ ಅಲ್ಲಿನ ಭಜಕರಿಂದ ಕೊಡಲ್ಪಟ್ಟ ಭೂಮಿದಾನವನ್ನು ಸ್ವೀಕರಿಸಿ ಅಲ್ಲಿ ಸಹಾ ಪೂಜೆಗೆ ವ್ಯವಸ್ಥೆ ಮಾಡಿ, ಅಜಪುರದ(ಬ್ರಹ್ಮಾವರ) ಮೂಲಕ ಸೀತಾನದಿಯನ್ನು ದಾಟಿ ಸೀತಾ ಸುವರ್ಣ ನದಿಗಳ ಸಂಗಮ ಸ್ಮಾರಕವಾಗಿ ಪ್ರತಿಷ್ಠಿಸಿರುವ ಸಂಗಮೇಶ್ವರ ಗುಡಿಯಿದ್ದಲ್ಲಿ ಐತಂದರು. ಇಲ್ಲಿಯೇ ಯತೀಶ್ವರರು ಅವರ ಆರಾಧ್ಯ ದೇವತೆಯಾದ ಉಗ್ರನರಸಿಂಹ ಮೂರ್ತಿಯನ್ನು ಪ್ರತಿಷ್ಠೆ ಮಾಡಬೇಕೆಂದು ನಿಶ್ಚಯಿಸಿ ಇಲ್ಲಿ ಒಬ್ಬ ಶಿಷ್ಯರಿಗೆ ಸಂನ್ಯಾಸ ದೀಕ್ಷೆಯನ್ನಿತ್ತರು. ಊರ ಜನರು ಕದಳೀ ಗುಚ್ಛಗಳನ್ನು ದ್ದೇವರಿಗೆ ಸಮರ್ಪಣೆಗೊಸ್ಕರ ಅರ್ಪಿಸಿದುದರಿಂದ ಈ ದ್ವೀಪಕ್ಕೆ ' ಕದಳಿದ್ವೀಪ' (ಬಾಳೆಕುದುರು) ಎಂಬ ಹೆಸರಾಯಿತು. 

ಅನಂತರ ದಕ್ಷಿಣ ದೇಶದ ತೀರ್ಥಯಾತ್ರೆಗಾಗಿ ಹೊರಟ ಕೈವಲ್ಯಾಶ್ರಮ ಸ್ವಾಮಿಗಳು ಉಡುಪಿ ಹತ್ತಿರ ಇರುವ ಪುತ್ತೂರು ಎಂಬಲ್ಲಿಗೆ ಬರಲು ಅಲ್ಲಿನ ವೈಷ್ಯನೊಬ್ಬನು ತುಂಬಾ ಹಣ ಖರ್ಚು ಮಾಡಿ ಕಟ್ಟಿಸಿದ ಕೆರೆಯಲ್ಲಿ ನೀರು ಬಾರದಿರಲು ವಿಷಾದಗೊಂಡು ಯತೀಶ್ವರರಿಗೆ ಭಿನ್ನವಿಸಲು ಅವರು ತೀರ್ಥಯಾತ್ರೆಯ ನಂತರ ಅತ್ತ ಬರುವುದಾಗಿ ವಚನವಿತ್ತರು. ಒಂದು ವರ್ಷದ ನಂತರ ಪುತ್ತೂರಿಗೆ ಪುನಃ ಆಗಮಿಸಿ ವರುಣನನ್ನು ಪ್ರಾರ್ಥಿಸಲು ಕೆರೆಯ ತಟದಲ್ಲಿ ನೀರಿನ ಬಗ್ಗೆ ಚಿಮ್ಮಿ ಸ್ವಾಮಿಗಳು ಮಾಯವಾದರು. ಈ ಕೆರೆಯೇ ಮಾಯಾಗುಂಡಿ ಎಂದು ಈಗ ಕರೆಯಲ್ಪಡುತ್ತಿದೆ. ಕೂಡಲೇ ಬಾಳಕುದರಿಂದ  ವಿದ್ಯಾಶ್ರಮ ಸ್ವಾಮಿಗಳನ್ನು ಕರೆಸಿ ಒಂದು ಮಠ ಕಟ್ಟಿಸಿ ಉಂಬಳಿಯನ್ನು ಬಿಟ್ಟನು. ಈ ಕೆರೆಯೇ ಮಠದ ಆದಿ ವೃಂದಾವನ ಎಂದು ಪರಿಗಣಿಸಲ್ಪಟ್ಟಿದೆ. 

ಅನಂತರ ಕೂಟಸ್ಥರಾದ ಕೈವಲ್ಯಾಶ್ರಮರ ಪರಂಪರೆಯಾಗಿ ವಿದ್ಯಾಶ್ರಮ, ಗೋವಿಂದಾಖ್ಯ, ರಾಮಾದಿತ್ಯ, ಜ್ಞಾನೇಂದ್ರಾಶ್ರಮ, ಪುರುಷೋತ್ತಮರೆಂಬ ಸ್ವಾಮಿಗಳಾದರು. ಆನಂತರ ಆನಂದಾಶ್ರಮ, ಶಂಕರಾಶ್ರಮ ಹಾಗೂ ನೃಸಿಂಹಾಶ್ರಮ ಎಂಬ ಮೂರನೇ ಪಾದದ ಸಂಪ್ರದಾಯವೇ ಪುನರಾವರ್ತನೆಯಾಗಿ ಬಂದಿದೆ. 

ಮೇಲಿನ ವೃತ್ತಾನಂತದಿಂದ ಕೆಲವು ತೀರ್ಮಾನಗಳನ್ನು ಅನುಮಾನಿತ ಸತ್ಯದಿಂದ ಮಾಡಬಹುದೆನ್ನಿಸುತ್ತದೆ. ಬಾಳಕುದುರು ಮಠದ ಸ್ಥಾಪನೆಯು ಸುಮಾರು ಕ್ರಿ ಶ ೧೦ನೆಯ ಶತಮಾನಕ್ಕೆ ಆಗಿದ್ದಿರಬಹುದು. ಮಾಯಾಗುಂಡಿ ಮಠದ ಸ್ಥಾಪನೆಯು ಬಾಳಕುದುರು ಮಠದಷ್ಟು ಪ್ರಾಚೀನವಾಗಿರಲಾರದು. ಅದು ಸುಮಾರು ೧೪-೧೫ ನೆಯ ಶತಮಾನದಷ್ಟು ಪ್ರಾಚೀನವಿರಬಹುದು. ಕೈವಲ್ಯಾಶ್ರಮ ಸ್ವಾಮಿಗಳು ಮೊದಲು ತಂಗಿದ ಪಟ್ಟಣ ಬಸರೂರು ಇದ್ದಿರಬಹುದು. ಇಲ್ಲಿ ಉಲ್ಲೇಖಗೊಂಡ ಸಾವಂತ ಅರಸನು ಆಳುಪ ದೊರೆ ಆಗಿದ್ದಿರಬಹುದು. ಬಾರಕೂರು ಈ ಸಮಯದಲ್ಲಿ ಆಳುಪರ ರಾಜಕೀಯ ಕೇಂದ್ರವೂ ಆಗಿತ್ತು. ಈಗ ನೀಲಾವರ ಎನ್ನುವ ಊರಿನ ಮೂಲ ಹೆಸರು ನೀರುವಾರವೆಂದಾಗಿರುವುದರಿಂದ ನೀರುವಾರವು ಸಂಸ್ಕೃತ ರೂಪದಲ್ಲಿ ಜಲಪುರ ಎಂದು ಈ ವಿವರದಲ್ಲಿ ಉಲ್ಲೇಖಗೊಂಡಿದೆ. ಕೈವಲ್ಯಾಶ್ರಮ ಸ್ವಾಮಿಗಳು ತಮ್ಮ ಮಠವನ್ನು ಬಾಲಕುದುರಲ್ಲಿ ಸ್ಥಾಪಿಸಿ ಅಲ್ಲಿ ಬಾಳಿಕೆಯಾಗಿ ಭೂದಾನವನ್ನು ಪಡೆದುದರಿಂದ  ಇದಕ್ಕೆ ಬಾಳಕುದುರು ಎಂಬ ಹೆಸರು ಬಂದಿರಬಹುದು.  

ಐತಿಹಾಸಿಕ ಹಿನ್ನೆಲೆಯಲ್ಲಿ ಬಾಳಕುದುರು ಮಠ

ನಮಗಿಷ್ಟರ ತನಕ ದೊರಕಿದ ಐತಿಹಾಸಿಕ ದಾಖಲೆಗಳಲ್ಲಿ ಕ್ರಿ ಶ ೧೩೩೫ ರ  ಶಿಲಾಶಾಸನವು ಮೊದಲಿನದಾಗಿದೆ. ಇದು ಉಡುಪಿಗೆ ಸಮೀಪವಿರುವ ಪುತ್ತೂರಿನ ಒಂದು ಭಾಗವಾದ ಮಾಯಾಗುಂಡಿಯಲ್ಲಿ ದೊರಕಿದ ಕಲ್ಬರಹ. ಈ ಮಠದ ಪರಂಪರೆಯನ್ನು ಇತಿಹಾಸದ ಹಿನ್ನೆಲೆಯಲ್ಲಿ ಪರಿಶೀಲಿಸಲು ಇದು ಬಹು ಉಪಯುಕ್ತವಾದುದು. ಇದರಲ್ಲಿ ಮಠದ ಹೆಸರು 'ಬಾಳುಕುದುರು ' ಎಂದೂ ಜ್ಞಾನೇಂದ್ರಾಶ್ರಮ ಶ್ರೀಪಾದಂಗಳವರ ಸಂಪ್ರದಾಯ ಪ್ರವರ್ತಕರಾದ ಪುರುಷೋತ್ತಮ ಪಾದಂಗಳಿಗೆ ಪಳಪಟ್ಟ ಪರಾಮನಾಯಕನು ಕೊಟ್ಟ ಧರ್ಮಪಟ್ಟಿ ವಿಚಾರ ಉಕ್ತವಾಗಿದೆ. ಜ್ಞಾನೇಂದ್ರಾಶ್ರಮ ಶ್ರೀಪಾದಂಗಳ ಗುರುಗಳ ಹೆಸರು ದಾಖಲೆಯಲ್ಲಿ ನಷ್ಟವಾಗಿ ಹೋಗಿದೆ. ಸಾಂಪ್ರದಾಯಿಕವಾಗಿ ರಾಮಾದಿತ್ಯ ಸ್ವಾಮಿಗಳು ಜ್ಞಾನೇಂದ್ರಾಶ್ರಮರ ಗುರುಗಳು ಎಂಬುದಾಗಿ ತಿಳಿಯಲಾಗಿದೆ. ಇವರ ಕಾಲವು ಕ್ರಿ. ಶ ೧೩ನೆ ಶತಮಾನದ ಮೊದಲ ಪಾದವಾಗಿರಬಹುದೆಂದು ಅನುಮಾನಿಸಬಹುದು. ರಾಮಾದಿತ್ಯ, ಜ್ಞಾನೇಂದ್ರಾಶ್ರಮ ಮತ್ತು ಪುರುಷೋತ್ತಮ ಶ್ರೀಪಾದಂಗಳವರ ಪರಂಪರೆ ಒಂದೂವರೆ ಶತಮಾನದವರೆಗೆ ಮಾತ್ರವಿತ್ತೆಂದು ತಿಳಿಯಬಹುದು. ಕಾರಣ ಆನಂತರದ ದಾಖಲೆಗಳಲ್ಲಿ ಬಾಳೆಕುದ್ರು ಆನಂದಾಶ್ರಮ ಸ್ವಾಮಿಗಳ ಮಠ ಎಂಬ ಉಲ್ಲೇಖ ಕಂಡುಬರುತ್ತದೆ. 

ನಮಗೆ ದೊರಕಿದ ಎರಡನೇ ದಾಖಲೆಯು ಕ್ರಿ ಶ ೧೪೧೭ಕ್ಕೆ ಅನ್ವಯಿಸುವ ಕಲ್ಬರಹ . ಇದು ವಿಜಯನಗರದ ದೊರೆಯಾದ ದೇವರಾಯನ ಕಾಲದ್ದಿದ್ದು ಆತನ ಕಾಲದ ಬಾರಕೂರಿನ ರಾಜ್ಯಪಾಲನಾದ ಶಂಕರದೇವ ಒಡೆಯನ ಅಪ್ಪಣೆಯಿಂದ ಬಾಳಕುದುರು ಮಠದ ಆನಂದಾಶ್ರಮ ಸ್ವಾಮಿಗಳ ಅಧಿದೇವತೆಯಾದ ನೃಸಿಂಹ ದೇವರ ಅಮೃತಪಡಿ ನಂದಾವೆಳಕಿಗೆ  ಬಿಟ್ಟ ಭೂಮಿಯ ವಿವರವನ್ನು ತಿಳಿಸುತ್ತದೆ. ಇದೆ ಶಾಸನದಲ್ಲಿ ೧೩೫೬ರಲ್ಲಿ ಬಾರಕೂರಿನ ರಾಜ್ಯಪಾಲನಾದ ಮಳೆಯ ಡಣ್ಣಾಯಕನು ಬಾಳಕುದುರು ಮಠದ ಆನಂದಾಶ್ರಮ ಸ್ವಾಮಿಗಳ ಅಧಿದೇವತೆಯಾದ ನೃಸಿಂಹ ದೇವರಿಗೆ ಅಮೃತಪಡಿ ನಂದಾವೆಳಕಿಗೆ ಕೊಟ್ಟ ದಾನದ ಉಲ್ಲೇಖ ಕಂಡುಬರುತ್ತದೆ. ಎಂದರೆ ಸುಮಾರು ೧೪ನೆ ಶತಕದ ಮಧ್ಯಕಾಲದಲ್ಲಿ ಆನಂದಾಶ್ರಮ ಸ್ವಾಮಿಗಳು ಗುರುಗಳಾಗಿ ಪಟ್ಟ ಸ್ವೀಕಾರ ಮಾಡಿದರೆಂದು ಖಚಿತವಾಗುತ್ತದೆ. 

ಬಾಳಕುದುರ ನರಸಿಂಹ ದೇವರ ಉಲ್ಲೇಖವು ಕ್ರಿ ಶ ೧೫೫೮ ಬಾರಕೂರಿನ ಒಂದು ಕಲ್ಬರಹದಲ್ಲಿಯೂ ಕಂಡು ಬರುತ್ತದೆ. 

ಅಂತೂ ಈ ಮಠಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಪರಂಪರೆಯಿದ್ದಂತೆ ಕಂಡುಬರುತ್ತದೆ. 

ಪರಂಪರೆಯಲ್ಲಿ ಕ್ರಿ. ಶ ೧೮೭೯ ರಲ್ಲಿ ಶಂಕರಾಶ್ರಮ ಸ್ಮಾಮಿಗಳೂ, ಕ್ರಿ ಶ ೧೯೦೮ ರಲ್ಲಿ ನೃಸಿಂಹಾಶ್ರಮ ಸ್ವಾಮಿಗಳೂ ಕ್ರಿ ಶ ೧೯೪೧ ರಲ್ಲಿ ಆನಂದಾಶ್ರಮ ಸ್ವಾಮಿಗಳೂ ಪಟ್ಟಕ್ಕೆ ಬಂದು ೧೯೬೧ರಿಂದ ಶಂಕರಾಶ್ರಮ ಸ್ವಾಮಿಗಳು ಅಧಿಕಾರದಲ್ಲಿ ಇದ್ದಾರೆ. 

(ಸೂಚನೆ: ಪ್ರಸ್ತುತ ಬರಹದಲ್ಲಿನ ಶಂಕರಾಶ್ರಮ ಸ್ವಾಮಿಗಳು ಕಾಲವಾಗಿ ಉತ್ತರಾಧಿಕಾರಿಯಾದ ನೃಸಿಂಹಾಶ್ರಮರು ಆರೂಢರಿದ್ದಾರೆ )

ಭಾಗವತ ಧರ್ಮದ ಭಕ್ತಿ ಮಾರ್ಗ 

ಪರಮಾತ್ಮನ ಕಡೆಗೆ ಭಕ್ತಿಮಾರ್ಗದಿಂದ ಪ್ರೀತಿಯನ್ನು ಅಚಲವಾಗಿ ಗಳಿಸುವ ಧರ್ಮವೇ ಭಾಗವತ ಧರ್ಮ ಅಥವಾ ಭಾಗವತ ಸಂಪ್ರದಾಯ ಎನ್ನಿಸಿಕೊಳ್ಳುತ್ತದೆ. ಈ ಸಂಪ್ರದಾಯವು ಏಕೈಕವಾದವನ್ನು ಪ್ರತಿಪಾದಿಸುತ್ತದೆ. ಇದನ್ನು ನಾವು ನಾರಾಯಣೀಯ, ಸಾತ್ವತಃ, ಏಕಾಂತಿಕ, ಮತ್ತು ಪಂಚರಾತ್ರ ಧರ್ಮವೆಂದು ಕರೆಯಬಹುದು. ಮಹಾಭಾರತದ ನಾರಾಯಣೀಯ ವಿಭಾಗ, ಭಗವದ್ಗೀತೆ, ಭಾಗವತ ಪುರಾಣ, ನಾರದಸೂತ್ರ ಮತ್ತು ಶಾಂಡಿಲ್ಯಸೂತ್ರಗಳು ಈ ಧರ್ಮದ ಮೂಲಗ್ರಂಥಗಳಾಗಿವೆ. ಭಕ್ತಿಯ ವೈಶಿಷ್ಟ್ಯವು ವೈದಿಕ ಸಾಹಿತ್ಯಗಳಲ್ಲಿಯೂ ಕಂಡು ಬರುತ್ತದೆ. ಉಪನಿಷತ್ತುಗಳಲ್ಲಿ ವಿಶೇಷರೂಪದಲ್ಲಿ ಕೆಲವೆಡೆ ತೋರಿಬರುತ್ತದೆ. 

ಭಕ್ತಿಮಾರ್ಗದ ಮೂಲಸೂತ್ರ ಹೀಗಿದೆ: ಪರಮಾತ್ಮನನ್ನು ಪಂಚೇಂದ್ರಿಯಗಳ ಮೂಲಕ ತಿಳಿಯಲು ಅಸಾಧ್ಯ. ಆತನ ಸ್ವರೂಪವು ವಾದ ಹಾಗೂ ತಾರಕಾತೀತವಾಗಿದೆ. ಆತನನ್ನು ಪರಿಪೂರ್ಣವಾದ ಭಕ್ತಿಯಿಂದ ಮಾತ್ರ ತಿಳಿಯಲು ಸಾಧ್ಯವಿದೆ. ಭಕ್ತಿಯ ಕಡೆಗೆ ನಮ್ಮನ್ನೆಳೆಯಲಾಗದ ತಪಸ್ಸಾಗಲೀ ಧಾರ್ಮಿಕ ವಿನಿಯೋಗವಾಗಲೀ ಪರಮಾತ್ಮನ ದರ್ಶನವನ್ನು ಕೊಡಲಾರವು. ಆತನಲ್ಲಿಯೇ ಲೀನವಾದ ಮನಸ್ಸು ಮಾತ್ರ ಆತನ ಸ್ವರೂಪವನ್ನು ಕಂಡುಕೊಳ್ಳಲು ಶಕ್ತವಾಗುವುದು. ತನ್ನಲ್ಲಿಯೇ ಭಕ್ತಿಮಾರ್ಗದಿಂದ ಎರಕದಂತೆ ಕಂಡುಬರುವವರಲ್ಲಿ ಪರಮಾತ್ಮನಿಗೆ ಅತ್ಯಂತ ಪ್ರೀತಿ. ಪರಮಾತ್ಮನಲ್ಲಿ ಶರಣು ಹೋಗುವುದಕ್ಕಿಂತ ಮೇಲಿನ ಧರ್ಮವಿಲ್ಲ. ಈ ರೀತಿಯ ಶರಣಾಗತಿಯಿಂದ ಆತನ ಕೃಪೆಯು ಲಭ್ಯವಾಗುತ್ತದೆ. ಜ್ಞಾನ ಮತ್ತು ಕರ್ಮ ಮಾರ್ಗಗಳು ಪ್ರತಿಯೊಬ್ಬನಿಗೂ ಸಾಧ್ಯವೆನ್ನುವಂತಿಲ್ಲ. ಭಕ್ತಿ ಮಾರ್ಗವು ಸಾರ್ವತ್ರಿಕ ಮತ್ತು ಸಾಧಕ. ಅದೊಂದು ಸರ್ವಮಾನ್ಯ ಪಂಥ. 

ದಕ್ಷಿಣಕನ್ನಡದಲ್ಲಿ ಮಾಧ್ವ ಪಂಥದ ಪ್ರಚಾರಕ್ಕಿಂತ ಮೊದಲು ಈ ಭಾಗವತ ಸಂಪ್ರದಾಯವು ಬಹಳ ಪ್ರಬಲವಾಗಿತ್ತೆನ್ನಬಹುದು. ಪಂಚಾಯತನ ಆರಾಧನೆಯಲ್ಲಿ ವಿಷ್ಣುಪ್ರಧಾನ ಪೂಜೆಯು ಈ ಸಂಪ್ರದಾಯಕ್ಕೆ ಕೇಂದ್ರವಾಗಿದೆ. ಇಷ್ಟು ಬಲವಂತವಾಗಿ ಈ ಸಂಪ್ರದಾಯವಿದ್ದುದರಿಂದಲೇ ಮಧ್ವರಿಗೆ ವಿಷ್ಣುಸರ್ವೋತ್ತಮ ಕೇಂದ್ರವಾದ ತಮ್ಮ ವೈಷ್ಣವ ಸಿದ್ಧಾಂತವನ್ನು ಪ್ರತಿಪಾದಿಸಿ ಮಾನ್ಯತೆ ಪಡೆಯಲು ಸಾಧ್ಯವಾಯಿತೆನ್ನಬಹುದು. ಭಕ್ತಿ ಮಾರ್ಗಕ್ಕೆ ಅತ್ಯಂತ ಶ್ರೇಷ್ಠವಾದ ದೃಷ್ಟಾಂತವು ನೃಸಿಂಹನ ಆರಾಧನೆಗಿಂತ ಇನ್ನೊಂದಿರಲಾರದೆಂಬುದರಿಂದಲೇ ನಾರಸಿಂಹಾರಾಧನೆಯು ಮಠದ ವೈಶಿಷ್ಟ್ಯವಾಗಿದೆ. 

ಯಾವುದೋ ಕಾಲದಲ್ಲಿ ಕೋಟ ಬ್ರಾಹ್ಮಣರೂ ಬಾಳಕುದುರು ಮಠದ ಶಿಷ್ಯರಾಗಿದ್ದಿರಬೇಕು, ಕಾರಣಾಂತರಗಳಿಂದ ಅವರು ಪ್ರತ್ಯೇಕವಾಗಿ ತಮ್ಮ ಸಾಮಾಜಿಕ ಹಾಗೂ ಧಾರ್ಮಿಕ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು. ಅಥವಾ ಕೋಟಸ್ಥರಲ್ಲಿ ದೀಕ್ಷೆ ಸ್ವೀಕಾರದಿಂದ ಅಸ್ಥಿತ್ವಕ್ಕೆ ಬಂದ ಮತವಾಗಿರಲೂಬಹುದು. ಕೋಟ ಬ್ರಾಹ್ಮಣರಿಗೂ ಅವರ ಆರಾಧ್ಯ ದೇವತೆಯು ಯೋಗಾನರಸಿಂಹನೆಂಬುದನ್ನು ನೆನೆಸಿಕೊಂಡಾಗ ಈ ರೀತಿಯ ಸಾಮೀಪ್ಯವಿದ್ದಿರಬೇಕೆಂದು ಅನುಮಾನಿಸಲು ಇಂಬಿದೆ. ನಮ್ಮ ಜಿಲ್ಲೆಯ (ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ) ಉತ್ತರ ಭಾಗದಲ್ಲಿ ಬಾಳಕುದುರು ಮಠವು ಭಾಗವತ ಸಂಪ್ರದಾಯವನ್ನು ಬಿತ್ತರಿಸಿದ್ದಾರೆ ದಕ್ಷಿಣದಲ್ಲಿ ಎಡನೀರು ಮಠವು ಈ ಸಂಪ್ರದಾಯವನ್ನು ಒಂದು ಸಾವಿರ ವರ್ಷಗಳಿಂದ ಪ್ರತಿಪಾದಿಸಿದೆ. ಈ ಮಠದ ದೇವತೆ ಗೋಪಾಲಕೃಷ್ಣ. 

ಬಾಳಕುದುರು ಮಠದಲ್ಲಿರುವ ವಿಗ್ರಹಗಳ ವೈಶಿಷ್ಟ್ಯ

ಪ್ರತಿಮಾ ವಿಜ್ಞಾನದ ದೃಷ್ಟಿಯಿಂದ ಹಾಗೂ ಆರಾಧನೆಯ ಸಾನ್ನಿಧ್ಯದಿಂದ ವಿಮರ್ಶಿಸುವಾಗ ಮಠದಲ್ಲಿರುವ ಈ ಕೆಳಗಿನ ಮೂರ್ತಿಗಳು ವೈಶಿಷ್ಟ್ಯಪೂರ್ಣವಾಗಿವೆ. ಉಗ್ರ ನರಸಿಂಹ, ಕರಾಳನರಸಿಂಹ, ಲಕ್ಷ್ಮಿ ನರಸಿಂಹ, ಯೋಗಾನರಸಿಂಹ, ಕಾಳಿಯಮರ್ದನ ಕೃಷ್ಣ, ವೇದವ್ಯಾಸ, ಪರಶುರಾಮ, ಮಹಿಷಮರ್ದಿನಿ, ಲಕ್ಷ್ಮಿ ಗಣಪತಿ, ಶ್ರೀ ರಾಜರಾಜೇಶ್ವರಿ, ದಕ್ಷಿಣಾಮೂರ್ತಿ, ನಟರಾಜ, ರಾಮ ಸೀತೆ, ಲಕ್ಷ್ಮಣ ಇವೆಲ್ಲವೂ ಪಂಚಲೋಹದ ಮೂರ್ತಿಗಳಾಗಿದ್ದು ಇವುಗಳ ವೈಲಕ್ಷಣಗಳನ್ನೊಳಗೊಂಡ ಚಿಕ್ಕ ವಿವರವನ್ನು ಈ ಕೆಳಗೆ ಕೊಟ್ಟಿದೆ.  

ಬಾಳಕುದುರು ಮಠದ ಪ್ರಧಾನ ದೇವರಾದ ಶ್ರೀ ಉಗ್ರನರಸಿಂಹ


-ಧ್ಯಾನ-  
ಅವ್ಯಾನ್ನಿರ್ವಾಜ ರೌದ್ರಾ ಕೃತನತ ವಿಕೃತಪ್ರೋಲ್ಲ ಸತ್ತೀಕ್ಷ್ಣದಂಷ್ಟ್ರ: 
ಚಕ್ರಂ ಶಂಖಂಚಪಾಶಾ0ಕುಶಕುಲಿಶ ಗಧಾಧಾರಣಾಖ್ಯಾನ್ ದಧಾನಃ 
ರಕ್ತಾಕಾರಶ್ಚ ನಾಭೇರಧರುಸರಿಸಿತೋ ದಿವ್ಯಭೂಷೋ ವಿಶೇಷಃ 
ದೇವೊರ್ಕಾಗ್ನೀಂದು ನೇತ್ರೋ ನಿಖಿಲ ಸುಖಕರೋ ನಾರಸಿಂಹಶ್ಚಿರನ್ನಃ 

(ಸಹಜ ಭಯಂಕರಾಕಾರವುಳ್ಳ ನಸುಬಾಗಿ ವಿಕೃತವಾಗಿ ಪ್ರಕಾಶಿಸುವ ತೀಕ್ಷ್ಣ ದಂತವುಳ್ಳ ಚಕ್ರ, ಶಂಖ, ಪಾಶ, ಅಂಕುಶ, ವಜ್ರಾಯುಧ, ಗಧಾ, ನಖರಾಯುಧಗಳನ್ನು ಧರಿಸಿರುವ ಕೆಂಬಣ್ಣದ ನಾಭಿಯ ಕೆಳಗೆ ಮತ್ತು ಮೇಲ್ಭಾಗದಲ್ಲಿ ಶುಕ್ಲವರ್ಣದಿಂದ ಶೋಭಿಸುವ ದಿವ್ಯಾಲಂಕಾರದಿಂದ ಕೂಡಿದ ವಿಶಿಷ್ಟನಾದ, ಸೂರ್ಯ ಅಗ್ನಿ ಮತ್ತು ಚಂದ್ರರೇ ಕಣ್ಣಾಗಿ ಉಳ್ಳ ಸಕಲ ಪ್ರಪಂಚಕ್ಕೆ ಕ್ಷೇಮಕಾರನಾದ ಶ್ರೀ ನರಸಿಂಹದೇವರು ಎಂದೆಂದಿಗೂ ನಮ್ಮನ್ನು ಕಾಪಾಡಲಿ) 


ಇದು ಮಠದ ಮೂಲ ಸ್ಥಾನ ಮೂರ್ತಿಯಾಗಿದೆ. ಈ ಮೂರ್ತಿಯ ಲಕ್ಷಣಗಳನ್ನು ಪರಿಶೀಲಿಸಿದಾಗ ಇದು ಎಷ್ಟೆಂದರೂ ೯೦೦-೧೦೦೦ ವರ್ಷಗಳಷ್ಟು ಪ್ರಾಚೀನವೆನ್ನಬಹುದು. ಈ ವಿಗ್ರಹವು ತೆಳ್ಳಗಾಗಿದ್ದು ಸುಮಾರು ೫' ಎತ್ತರವಿದೆ. ನರಸಿಂಹನ ಉಗ್ರಸ್ವರೂಪ ಮುಖದಲ್ಲಿಯೂ ಕೃತ್ಯದಲ್ಲಿಯೂ ಚೆನ್ನಾಗಿ ಬಿಂಬಿತವಾಗಿದೆ. ಚತುರ್ಬಾಹುವಾದ ಈ ವಿಗ್ರಹದ ಮೇಲಿನ ಎರಡು ಕೈಗಳಲ್ಲಿ ಚಕ್ರ ಶಂಖಗಳು ನಿರ್ದೇಶಿಸಲ್ಪಟ್ಟಿವೆ. ಕೆಳಗಿನ ಬಾಹುಗಳಲ್ಲಿ ಎದ ಕೈಯ್ಯಲ್ಲಿ ಹಿರಣ್ಯಕಶ್ಯಪುವಿನ ಉದರವನ್ನು ಸೀಳುವ ಕ್ರಿಯೆಯು ತೋರಿಸಲ್ಪಟ್ಟಿದೆ. ನರಸಿಂಹನು ಬಳಕಾಲಿನ ಮೇಲೆ ನಿಂತುಕೊಂಡು ಎಡಕಾಲನ್ನು ಅಡ್ಡಕ್ಕೆ ಇರಿಸಿಕೊಂಡು ಈ ರೀತಿಯಾಗಿ ಇರಿಸಲ್ಪಟ್ಟ ಎಡಕಾಲಿನ ತೊಡೆಯ ಮೇಲೆ ಹಿರಣ್ಯಕಶಿಪುವನ್ನು ಮಲಗಿಸಿ ಒಂದೇ ಕೈಯ್ಯಲ್ಲಿ ಆತನ ಉದರವನ್ನು ಸೀಳುವ ಈ ಒಂದು ನಿರ್ದೇಶವು ಉಗ್ರ ನರಸಿಂಹನ ಲಕ್ಷಣಕ್ಕೆ ಸರಿ ಒಪ್ಪುವಂತದ್ದಾಗಿದೆ. ಈ ಲಕ್ಷಣಗಳನ್ನೊಳಗೊಂಡ ಮೂರ್ತಿ ಬಹು ವಿರಳ. ಪ್ರಾಚೀನತೆಯ ದೃಷ್ಟಿಯಿಂದ ಈ ವಿಗ್ರಹವು ಸವೆದುದು ಮಾತ್ರವಲ್ಲದೆ ನಿರ್ಬಲವೂ ಆಗಿದೆ. 


ಕರಾಳ ನರಸಿಂಹ 


(ಸುಮಾರು ೧೨ನೆಯ ಶತಮಾನ) 

ಈ ಮೂರ್ತಿಯು ಸುಮಾರು ಒಂದು ಅಡಿ ಎತ್ತರವುಳ್ಳುದಾಗಿದೆ. ಇದು ಸಹ ಬಹಳ ವೈಶಿಷ್ಟ್ಯಪೂರ್ಣ ಬಿಂಬವಾಗಿದೆ. ನರಸಿಂಹ ಎಡಕಾಲಿನ ಮೇಲೆ ಅರ್ಧ ನೃತ್ಯ ಭಂಗಿಯಲ್ಲಿ ನಿಂತುಕೊಂಡು ಬಳಕಾಳನ್ನು ಅಡ್ಡಕ್ಕೆ ಇರಿಸಿ ಹೀಗೆ ನಿರ್ಮಾಣವಾದ ಕ್ಷೇತ್ರದ ಮೇಲೆ ಹಿರಣ್ಯಕಶಿಪುವನ್ನು ಅಡ್ಡಕ್ಕೆ ಮಲಗಿಸಿ ಆತನ ಉದರವನ್ನು ಸೀಳುವ ಈ ನಿರ್ದೇಶನವೂ ಬಹು ಭಯಂಕರವಾಗಿ ತೋರಿಬರುತ್ತದೆ. ಈ ಬಿಂಬವು ೮ ಭುಜಗಳಿಂದ ಕೂಡಿದ್ದು ಆ ಭುಜಗಳ ಪ್ರಯೋಗವು ಈ ಕೆಳಗಿನಂತಿದೆ. ಮೇಲಿನ ಎರಡು ಕೈಗಳು ಚೇಳಿನಾಕಾರದಲ್ಲಿ ಊರ್ಧ್ವಮುಖವಾಗಿ ತೋರಿಸಲ್ಪಟ್ಟು ಧೀರ್ಘವಾದ ನಖವೇ ಆಯುಧವಾಗಿದೆ. ಈ ಭುಜಗಳಿಗೆ ತಾಗಿ ಕೆಳಗಿನ ಎರಡು ಭುಜಗಳು ಕೆಳಮುಖವಾಗಿ ಕೋನಾಕಾರದಲ್ಲಿ ನಿರ್ದೇಶಿಸಲ್ಪಟ್ಟು ಮೊನಚಾದ ಮತ್ತು ಸೂಕ್ಷ್ಮವಾದ ಉಗುರುಗಳಿಂದ ಹಿರಣ್ಯಕಶಿಪುವಿನ ಹೊಟ್ಟೆಯನ್ನು ಬಗೆಯುವ ಉಗ್ರ ಕ್ರಿಯೆಯನ್ನು ತೀಕ್ಷ್ಣವಾಗಿ ತೋರಿಸುತ್ತವೆ. ಈ ರೀತಿಯಾಗಿ ನಿರ್ದೇಶಿಸಿದ ಕೆಳಗಿನ ಎರಡು ಕೈಗಳ ಮೊಣಗಂಟುಗಳಿಂದ ಎರಡೆರಡು ಬಾಹುಗಳು ತೋರಿಸಲ್ಪಟ್ಟಿವೆ. 

ಬಲಬದಿಯ ಮೇಲಂಬಾಹುವಿನಲ್ಲಿ ಚಕ್ರವು ತೋರಿಸಲ್ಪಟ್ಟಿದೆ ಕೆಳಗಿನ ಬಾಹುವು ಹಿರಣ್ಯಕಶಿಪುವಿನ ತಲೆಯನ್ನು ಒತ್ತಿ ಹಿಡಿದ ನಿರ್ದೇಶನವನ್ನು ಒಳಗೊಂಡಿದೆ. ಎಡಭಾಗದ ಮೇಲ್ಮೈಯ್ಯಿಯು ತುಂಡಾಗಿದ್ದು ಮೂಲದಲ್ಲಿ ಶಂಖವನ್ನು ಧರಿಸಿದ್ದಿರಬೇಕು. ಕೆಳಗಿನ ಕೈಯ್ಯಿಯು ಹಿರಣ್ಯಕಶಿಪುವಿನ ಎಡಕಾಲನ್ನು ಹಿಡಿದ ನಿರ್ದೇಶನವು ಸ್ಪಷ್ಟವಾಗಿದೆ. ನಿಸ್ಸಹಾಯಕನಾಗಿ ಕೈ ಚಾಚಲ್ಪಟ್ಟ ಹಿರಣ್ಯಕಶಿಪುವಿನ ಪರಿಸ್ಥಿತಿಯು ಬಹು ಚಿಂತಾಜನಕವಾಗಿದೆ. ವಿಗ್ರಹವು ಪದ್ಮಪೀಠದ ಮೇಲೆ ನಿಂತಿದ್ದು ಶಂಖಾಕಾರದ ಕಿರೀಟವನ್ನು ಒಳಗೊಂದು ಉಗ್ರತೆಯ ಮತ್ತು ಭೀಕರತೆಯ ಲಕ್ಷಣಗಳನ್ನು ಬಹು ಸ್ಪಷ್ಟವಾಗಿ ನಿರ್ದೇಶಿಸುತ್ತದೆ. ಈ ವಿಗ್ರಹವು ಸುಮಾರು ೮೦೦ ವರ್ಷಗಳಷ್ಟು ಪ್ರಾಚೀನವಿರಬಹುದು. 


ಲಕ್ಷ್ಮಿ ನರಸಿಂಹ ಮೂರ್ತಿ 


ಸುಮಾರು ಕ್ರಿ ಶ ೧೪ ನೆಯ ಶತಮಾನ.

-ಧ್ಯಾನ-  
 ಸತ್ಯ ಜ್ಞಾನ ಸುಖ ಸ್ವರೂಪಮಮಲಂ ಕ್ಷೀರಾಭ್ಧಿ ಮಧ್ಯೇಸ್ಥಿತ೦ 
ಯೋಗಾರೂಢಮತಿ: ಪ್ರಸನ್ನವದನಂ ಭೂಷಾ ಸಹಸ್ರೋಜ್ವಲಂ 
ತ್ರ್ಯಕ್ಷಮ್ ಚಕ್ರಾಪಿನಾಕಸಾಭಯಮಾನ್ ಬಿಭ್ರಾಣಮರ್ಕಚ್ಛವಿಂ 
ಛತ್ರೀಭೂತ ಫಣೀಂದ್ರಮಿಂದುಧವಳಂ ಲಕ್ಷ್ಮೀನೃಸಿಂಹಂ ಭಜೇ 

( ಸತ್ಯಾತ್ಮಕನೂ ಜ್ಞಾನಸ್ವರೂಪಿಯೂ ಸುಖರೂಪನೂ ಆದ ಕ್ಷೀರಸಾಗರದ ಮಧ್ಯದಲ್ಲಿ ನೆಲೆಸಿರುವ ಸಮಾಧಿಸ್ಥನಾದ ಪ್ರಸನ್ನತೆಯ ಮುಖಭಾವವುಳ್ಳ ಸಹಸ್ರಾರು ಅಲಂಕಾರಗಳಿಂದ ಮಂಡಿತನಾದ ಮೂರು ಕಣ್ಣುಳ್ಳ ಚಕ್ರ ಪಿನಾಕ ಧನಸ್ಸು ಮತ್ತು ಅಭಯ ವರಮುದ್ರೆಗಳಿಂದ ಕೂಡಿದ ಸೂರ್ಯಪ್ರಭೆಯುಳ್ಳ ಶೇಷನೇ ಛತ್ರವಾಗಿವುಳ್ಳ ಚಂದ್ರಕಾಂತಿಯಿಂದ ಒಪ್ಪುವ ಶ್ರೀ ಲಕ್ಷ್ಮೀ ನರಸಿಂಹನನ್ನು ಭಜಿಸುತ್ತೇನೆ )

ಇದು ೪'-ರಿಂದ ೪.೫೦' ಎತ್ತರದ ಬಿಂಬ. ಸ್ವಲ್ಪ ದಪ್ಪವಾಗಿದ್ದು ಸುಮಾರು ವಿಜಯನಗರ ಕಾಲದ ಪ್ರತಿಮೆ ಎನ್ನಬಹುದು. ವಿಗ್ರಹವು ಲಲಿತಾಸನದಲ್ಲಿದ್ದು ಎಡತೊಡೆಯ ಮೇಲೆ ಲಕ್ಷ್ಮಿಯು ಕುಳ್ಳಿರಿಸಲ್ಪಟ್ಟಿದ್ದಾಳೆ. ಮೇಲಿನ ಎರಡು ಕೈಯ್ಯಲ್ಲಿ ಶಂಖ ಚಕ್ರಗಳೂ ಕೆಳಗಿನ ಎಡ ಕೈಯು ಲಕ್ಷ್ಮಿಯ ಆಲಿಂಗನದಲ್ಲಿಯೂ, ಕೆಳಗಿನ ಬಲ ಕೈಯು ವರದವಾಗಿಯೂ ತೋರಿಸಲ್ಪಟ್ಟಿದೆ. ಮುಖವು ಸ್ವಾಭಾವಿಕ ಸಿಂಹದಂತಿರದೆ ನರಸಿಂಹ ಸಾಲಿಗ್ರಾಮದಲ್ಲಿ ಕಂಡು ಬರುವಂತೆ ನಿರ್ದೇಶನವನ್ನೊಳಗೊಂಡಿದೆ.


ಯೋಗ ನರಸಿಂಹ 

ಸುಮಾರು ಕ್ರಿ ಶ ೧೩-೧೪ ನೆಯ ಶತಮಾನ 

ಇದರಲ್ಲಿ ಎರಡು ರೀತಿಯ ಬಿಂಬಗಳಿವೆ. ಒಂದು ಯೋಗ ಪಟ್ಟ ಸಹಿತವಾದ ಲಕ್ಷ್ಮೀನರಸಿಂಹ ಇನ್ನೊಂದು ಯೋಗ ಪಟ್ಟಿ ಇಲ್ಲದ ನರಸಿಂಹ. ಯೋಗ ನರಸಿಂಹ ವಿಗ್ರಹವು ಸುಮಾರು ೪' ಎತ್ತರವಿದ್ದು ಸಾಧಾರಣ ೬೦೦ ವರ್ಷಗಳಷ್ಟು ಪ್ರಾಚೀನವಾಗಿದೆ. ಮೇಲಿನ ಕೈಗಳಲ್ಲಿ ಚಕ್ರ, ಶಂಖಗಳು ಆಯುಧಗಳಾಗಿವೆ. ಕೆಳಗಿನ ಕೈಗಳು ಯೋಗ ಪಟ್ಟಿಯಿಂದ ಕಾಲುಗಳ ಮೊಣಗಂಟಿನ ಮೇಲೆ ಇರಿಸಲ್ಪಟ್ಟಿವೆ. ಗರುಡನ ನಿರ್ದೇಶನವು ಪಾಣಿಪೀಠದ ಎದುರು ಭಾಗದಲ್ಲಿ ಕಂಡು ಬರುತ್ತದೆ. ಯೋಗ ಪಟ್ಟಿ ಇಲ್ಲದ ಯೋಗ ನರಸಿಂಹ ವಿಗ್ರಹವು ವಿಚಿತ್ರವಾಗಿದೆ. ಚತುರ್ಬಾಹುವಾದ ಈ ವಿಗ್ರಹ ೩' ಎತ್ತರವಿದ್ದು ಅಂಡಾಕಾರದ ಹೂವಿನ ಬಳ್ಳಿಯಂತಿರುವ ಪ್ರಭಾವಳಿಯನ್ನು ಒಳಗೊಂಡಿದೆ. ಯೋಗ ಭಂಗಿಯಲ್ಲಿ ತೋರಿಸಲ್ಪಟ್ಟ ಕಾಲುಗಳನ್ನು ವಿಗ್ರಹದ ಎರಡು ಕೈಗಳು ಹಿಡಿದುಕೊಂಡಿವೆ. ಮೇಲಿನ ಕೈಗಳಲ್ಲಿ ಚಕ್ರ ಶಂಖಗಳು ಆಯುಧಗಳಾಗಿವೆ. ಇಂತಹ ಮೂರ್ತಿಗಳು ಬಹು ವಿರಳ.  


ಲಕ್ಷ್ಮಿ ಗಣೇಶ (ವಲ್ಲಭ ಗಣೇಶ)

-ಧ್ಯಾನ-
ಹಸ್ತೀ೦ದ್ರಾನನಮಿ೦ದು ಚೂಡಮರುಣಛ್ಚಾಯಂ ತ್ರಿನೇತ್ರಂ ರಸಾದಾಸ್ಲಿಷ್ಟ೦
ಪ್ರಿಯೆಯಾ ಸ್ವಪದ್ಮ ಕಲಿಯಾ ಸ್ವಾ೦ಕಸ್ಥಯಾ ಸಂತತಮ್|
ಬೀಜಾಪೂರ ಗದಾಧನು ಸ್ತ್ರೀಶಿಖಯುಕ್ ಚಕ್ರಾಬ್ಜ ಪಾಶೋತ್ಪಲ ವ್ರೀಹ್ಯಗ್ರ
ಸ್ವವಿಷಾಣ ರತ್ನ ಕಲಶಾನ್ ಹಸ್ತೈರ್ವ ಹಂತಂ ಭಜೇ ||

(ಚಂದ್ರಶೇಖರನಾದ, ಕೆಂಬಣ್ಣದ, ಮೂರು ಕಣ್ಣುಳ್ಳ, ತೊಡೆಯಲ್ಲಿ ಕುಳಿತ, ಏಕಪದ್ಮಾಸನದಲ್ಲಿರುವ, ವಲ್ಲಭೆಯಿಂದ ಪ್ರೀತಿಯಿಂದ ಆಲಂಗಿತನಾದ, ದಾಳಿಂಬ, ಗದೆ, ಧನುಸ್ಸು, ತ್ರಿಶೂಲ, ಚಕ್ರ, ಪಾಶ, ನೈದಿಲೆ, ತೆನೆ , ದಂತ, ರತ್ನ ಕಲಶಗಳನ್ನು ಕೈಗಳಿಂದ ಹಿಡಿದಿರುವ ಗಜವದನನನ್ನು ಸೇವಿಸುತ್ತೇನೆ.)

4.5' ಎತ್ತರದ ದಪ್ಪಗಿನ ದಶಭುಜ ಗಣಪತಿ ವಿಗ್ರಹವಿದಾಗಿದೆ. ಇದರ ಶಿಲ್ಪಿ ಶೈಲಿಯು ಆರೇಳು ಶತಮಾನಗಳಷ್ಟು ಹಿಂದಣದ್ದೆನ್ನಬಹುದು. ಸೊಂಡಿಲಲ್ಲಿ ರತ್ನಕಲಶವನ್ನು ಹಿಡಿದುಕೊಂಡು ಕೈಗಳಲ್ಲಿ ದಾಳಿಂಬ, ಗದೆ, ಕಬ್ಬು, ಧನಸ್ಸು, ಫಲ, ಶಂಖ, ಚಕ್ರ, ಪಾಶ, ಮತ್ತು ಕಮಲಗಳನ್ನು ಧರಿಸಿಕೊಂಡು, ನಿಜವಾಗಿಯೂ ಲಂಬೋದರನಾಗಿರುವ ಈ ಮೂರ್ತಿಯು ವಿಶೇಷ ಮಹತ್ವ ಉಳ್ಳುದಾಗಿದೆ.

ವರದ ಗಣೇಶ 


ಪಾಣಿಪೀಠವನ್ನೊಳಗೊಂಡು ಒಂದು ಅಡಿ ಎತ್ತರವಾಗಿರುವ ಮಠದ ಸುತ್ತಿನಲ್ಲಿ ಅಂಗಳದಲ್ಲಿರುವ ವರದ ಗಣೇಶನ ಶೀಲಾ ಮೂರ್ತಿಯು ಚಿಕ್ಕದಾದರೂ ಭವ್ಯವಾಗಿದೆ. ಇದೊಂದು ಶಿಲ್ಪದಲ್ಲಿಯೇ ಸಾಲಂಕಾರ ಮೂರ್ತಿ. ವರದ ಹಸ್ತಗಳನ್ನೊಳಗೊಂಡ ಗಣೇಶ ಬಿಂಬಗಳೂ ಬಹಳ ವಿರಳವಾಗಿವೆ. ಇದರ ಇನ್ನೊಂದು ವೈಶಿಷ್ಟ್ಯವೆಂದರೆ ಮೇಲಿನ ಕೈಗಳಲ್ಲಿ ಅಂಕುಶ, ಪಾಶವಿರುವ ಬದಲಾಗಿ ಅಂಕುಶ, ಕಬ್ಬಿಣ ತುದಿಕೋಲನ್ನು ಧರಿಸಿಕೊಂಡುದಾಗಿದೆ. ಈ ರೀತಿ ಗಣೇಶನ ಉಪಾಸನೆಯು ವಿದ್ಯೆಯ ಪ್ರಸಾದವನ್ನು ಕೊಡುವುದಾಗಿದೆ. ಮುಖವು ಪ್ರತ್ಯಕ್ಷ ಆನೆಯ ಮುಖವನ್ನೇ ಹೋಲುತ್ತದೆ. ಸುಮಾರು ಕ್ರಿ ಶ೧೩-೧೪ನೆ ಶತಕದ ಬಿಂಬವಾಗಿದೆ. 



ರಾಜರಾಜೇಶ್ವರಿ



ಪ್ರಭಾವಳಿ ಪೀಠ ಸಹಿತ ೪' ಎತ್ತರವುಳ್ಳ ವಿಗ್ರಹವಿದು. ಆರಾಧನೆಯ ದೃಷ್ಟಿಯಿಂದ ಬಹು ಸಾನ್ನಿಧ್ಯವುಳ್ಳ ವಿಗ್ರಹ. ಮೇರುಪರ್ವತವೇ ಪೀಠವಾಗಿದ್ದು ಅದರ ಮೇಲೆ ಪದ್ಮಾಸನಸ್ಥವಾಗಿರುವ ರಾಜರಾಜೇಶ್ವರಿ ವಿಗ್ರಹವಿದಾಗಿದೆ. ಪಾಶ ಅಂಕುಶ, ಇಕ್ಷುಚಾಪ ಮತ್ತು ಪಂಚಪುಷ್ಪಗಳು ಆಯುಧಗಳಾಗಿವೆ. ಇಂತಹ ಪ್ರತಿಮೆಗಳೂ ಅತಿ ವಿರಳ ಎನ್ನಬಹುದು. 

ಮಹಿಷಾಸುರ ಮರ್ದಿನೀ 





ಇದು ಒಂದಡಿ ಎತ್ತರವಾಗಿರುವ ಕಲಾನಿಧಿಯೇ ಆಗಿರುವ ಪಂಚಲೋಹದ ಅಖಿಲ ಕರ್ನಾಟಕದಲ್ಲಿ ಮಹತ್ವ ಪಡೆಯಬಹುದಾದ ಬಿಂಬವಾಗಿದೆ. ತ್ರಿಶೂಲವು ಮುರಿದು ವಿಗ್ರಹವು ಸ್ವಲ್ಪ ಭಿನ್ನವಾಗಿದೆ ಅನ್ನಬಹುದು. ಮಹಿಷನನ್ನು ಬಳಕಾಲಿನಿಂದ ಮೆಟ್ಟಿ ಮಹಿಷನ ಭಾಗವಾದ ಕುತ್ತಿಗೆಯಿಂದ ಅಸುರನ ತಲೆಯನ್ನು ಹಿಡಿದು, ತ್ರಿಶೂಲದಿಂದ ಮಹಿಷನ ಭುಜವನ್ನಿರಿಯುವ ಈ ಭಂಗಿಯು ಬಹಳ ಆಕರ್ಷಣೀಯವಾಗಿದೆ. ಎಂಟು ಭುಜಗಳಿರುವ ಪ್ರತಿಮೆ ಇದಾಗಿದ್ದು ವಾಹನವಾದ ಸಿಂಹವು ಹಿಂಬದಿಯಿಂದ ನಿಷ್ಕ್ರಿಯ ರೂಪದಲ್ಲಿ ಆದಾಗ್ಯೂ ಸಿಟ್ಟಿನಾವೇಶದಿಂದ ನಿರೂಪಿಸಲ್ಪಟ್ಟಿದೆ. ಅಸುರನನ್ನು ವಧಿಸುವುದರಲ್ಲಿಯೇ ಸಂಪೂರ್ಣವಾಗಿ ಲೀನವಾಗಿರುವ ಗಂಭೀರವಾದ ಮುಖಮುದ್ರೆಯಿಂದ ಕೂಡಿದ ಅಪೂರ್ವ ಮೂರ್ತಿ ಇದಾಗಿದೆ. ಇದು ಸುಮಾರು  ಕ್ರಿಶ ೧೨ನೆ ಶತಕದ ಪ್ರತಿಮೆ. 

ಇನ್ನಿತರ ಬಿಂಬಗಳು

  • ಸುಮಾರು ನಾಲ್ಕು ಇಂಚು ಎತ್ತರದ ಪರಶುರಾಮ ವಿಗ್ರಹವೂ (ಇದರ ಆಯುಧವಾದ ಬಿಲ್ಲು ಭಿನ್ನವಾಗಿ ಹೋಗಿದೆ, ಪರಶು ಮಾತ್ರ ಕಂಡುಬರುತ್ತದೆ)
  • ಪದ್ಮಾಸನಸ್ಥವಾದ ವೇದವ್ಯಾಸ ಮೂರ್ತಿಯು (೩" ಸುಮಾರು)
  • ನಾಲ್ಕು ಇಂಚು ಎತ್ತರದ ರಾಮಚಂದ್ರನ ಮೂರ್ತಿ 
  • ಮೂರು ಇಂಚು ಎತ್ತರದ ಕಾಳೀಯ ಮರ್ದನನ ಮೂರ್ತಿ 
  • ೨.೫" ಎತ್ತರದ ಚತುರ್ಬಾಹು ದಕ್ಷಿಣಾಮೂರ್ತಿಯೂ ಆಕರ್ಷಣೀಯ ಸಾನ್ನಿಧ್ಯ ಸಂಪತ್ತುಳ್ಳುದೂ ಆಗಿದೆ. 
  • ೨.೫' ಎತ್ತರದ ಚಂದನದಿಂದ ಕೊರೆಯಲ್ಪಟ್ಟ ಶಾರದೆಯ ಮೂರ್ತಿಯು ಎಷ್ಟೆಂದರೂ ೪೦೦ ವರ್ಷಗಳಷ್ಟಾದರೂ ಹಳೆಯದು ಎನ್ನಬಹುದು. 
  • ೨.೫" ಎತ್ತರದ ವೇಣುಗೋಪಾಲ ಮೂರ್ತಿಯು ಸುಮನೋಹರವಾಗಿದೆ. 
(ಈ ಲೇಖನವನ್ನು ಬರೆಯಲು ಅನುಕೂಲವಾಗುವಂತೆ ಅಧಿಕೃತ ದಾಖಲೆಗಳನ್ನು ಒದಗಿಸಿ ಕೊಟ್ಟು ಛಾಯಾಚಿತ್ರಗಳನ್ನು ತೆಗೆಸಿಕೊಟ್ಟು ಮಾರ್ಗದರ್ಶನ ಮಾಡಿದ ಪರಮಪೂಜ್ಯ ಬಾಳಕುದುರು ಮಠದ ಶ್ರೀ ಶಂಕರಾಶ್ರಮ ಸ್ವಾಮೀಜಿಯವರಿಗೂ ಈ ಲೇಖನವನ್ನು ಸಚಿತ್ರವಾಗಿ ಪ್ರಕಟಿಸಿದ ಪ್ರಕಾಶದ ಸಂಪಾದಕರಿಗೂ ನನ್ನ ಕೃತಜ್ಞತೆಗಳು. ಧ್ಯಾನ ಶ್ಲೋಕಗಳ ಕನ್ನಡಾರ್ಥಗಳನ್ನು ಇತ್ತ ಉಡುಪಿ ಸಂಸ್ಕೃತ ಕಾಲೇಜಿನ ಪ್ರಿನ್ಸಿಪಾಲರಾದ ಶ್ರೀ ಕೆ ಹರಿದಾಸ ಉಪಾಧ್ಯಾಯ, ಎಂ ಎ. ಇವರಿಗೂ ಕೃತಜ್ಞತೆಗಳು)

*****************************







Comments

  1. ಚಿತ್ರಗಳು ಹಾಗು ನಿರೂಪಣೆಗಾಗಿ ಧನ್ಯವಾದಗಳು.

    ReplyDelete
    Replies
    1. ದಿವಂಗತ ಗುರುರಾಜ ಭಟ್ಟರಿಗೆ ಅರ್ಪಣೆ 🙏

      Delete

Post a Comment

Popular posts from this blog

ವರ್ಣಾಶ್ರಮಗಳು ಮತ್ತು ಧರ್ಮ

ಕಂಡುಳಿದವರು ಉಲಿದಂತೆ...